ಕರ್ನಲ್ ಬಿಕ್ಕುಮಲ್ಲ ಸಂತೋಷ್ ಬಾಬು (೧೯೮೨-೧೫ ಜೂನ್ ೨೦೨೦) ಭಾರತೀಯ ಸೇನೆಯ ಹುತಾತ್ಮ ಯೋಧ. ೧೬ ಬಿಹಾರ್ ರೆಜಿಮೆಂಟಿನ ಕಮಾಂಡರ್ ಆಗಿ,೨೦೨೦ರ ಭಾರತ-ಚೀನಾ ಕಲಹದಲ್ಲಿ ವೀರಮರಣ ಪಡೆದ ಸೇನಾನಿ. == ಬಾಲ್ಯ == ತೆಲಂಗಾಣದ ಸೂರ್ಯಾಪೇಟದಲ್ಲಿ ಜನಿಸಿದ ಸಂತೋಷ್, ಬ್ಯಾಂಕರ್ ತಂದೆ ಬಿಕ್ಕುಮಲ್ಲ ಉಪೇಂದ್ರ ಮತ್ತು ಮಂಜುಳಾ ದಂಪತಿಯ ಮಗನಾಗಿ ೧೯೮೨ರಲ್ಲಿ ಜನಿಸಿದರು. ೬ನೆಯ ತರಗತಿಯಲ್ಲಿ ಕೊರುಕೊಂಡದ ಸೈನಿಕ ಶಾಲೆ ಸೇರಿದ ಸಂತೋಷ್, ೧೨ನೆಯ ತರಗತಿಯನ್ನು ಸೈನಿಕ ಶಾಲೆಯಲ್ಲಿ ಮುಗಿಸಿದರು. == ಕುಟುಂಬ == ಕರ್ನಲ್ ಸಂತೋಷ್ ,ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಬ್ಯಾಂಕರ್ ಬಿಕ್ಕುಮಲ್ಲ ಉಪೇಂದ್ರ ಮತ್ತು ಮಂಜುಳಾರ ಮಗ. ಇವರ ಪತ್ನಿ ಸಂತೋಷಿ. ೨೦೧೧ರಲ್ಲಿ ಮಗಳು ಅಭಿಜ್ಞಾ ಮತ್ತು ೨೦೧೫ರಲ್ಲಿ ಮಗ ಅನಿರುದ್ಧ ಜನನ. ದಿಲ್ಲಿಯಲ್ಲಿ ಸೇನಾ ಕಂಟೋಣ್ಮೆಂಟಿನಲ್ಲಿ ವಾಸ. == ಸೈನಿಕ ವೃತ್ತಿ == ಡಾರ್ಜಿಲಿಂಗಿನ ಭಾರತೀಯ ಮಿಲಿಟರಿ ಅಕಾಡೆಮಿಗೆ ಆಯ್ಕೆಯಾದ ಸಂತೋಷ್, ೨೦೦೪ರಲ್ಲಿ ಪುಣೆಯ ರಾಷ್ಟ್ರೀಯ ಸೇನಾ ಅಕಾಡೆಮಿಯಿಂದ ಸೇನಾ ಅಧಿಕಾರಿಯಾಗಿ ತೇರ್ಗಡೆಯಾದರು. ೨೦೦೪ರ ಡಿಸೆಂಬರ್ ೧೦ರಂದು ೧೬ ಬಿಹಾರ್ ರೆಜಿಮೆಂಟ್ ಗೆ ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡರು. ತರಬೇತಿಯ ನಂತರ ಸಂತೋಷ್ ಜಮ್ಮು ಕಾಶ್ಮೀರ ರಾಜ್ಯದ ಸೇನಾ ಬ್ಯಾರಕ್ ಸೇರಿದರು. == ಸೇವಾ ಹಿರಿಮೆ == ೨೦೦೬ರಲ್ಲಿ ಕ್ಯಾಪ್ಟನ್ ಆಗಿ ಪದೋನ್ನತಿ ಪಡೆದ ಸಂತೋಷ್, ೨೦೦೧ರಲ್ಲಿ ಮೇಜರ್ ಪದವಿ ಪಡೆದರು. ಕಾಂಗೊ ನಲ್ಲಿ ಸಂಯುಕ್ತ_ರಾಷ್ಟ್ರ_ಸಂಸ್ಥೆ ಶಾಂತಿ ದಳದಲ್ಲಿ ಸೇವೆ ಸಲ್ಲಿಸಿದ ಸಂತೋಷ್, ಅಲ್ಲಿನ ಜನ-ಸೇನೆ ಮತ್ತು ಸರ್ಕಾರದ ಮೆಚ್ಚುಗೆ ಪಡೆದರು. ೨೦೧೭ರಲ್ಲಿ ಲೆಫ್ಟಿನೆಂಟ್ ಕರ್ನಲ್ ಆದ ಸಂತೋಷ್, ಮತ್ತೆ ಜಮ್ಮು ಕಾಶ್ಮೀರದಲ್ಲಿ ತಮ್ಮ ಮಾತೃ ರೆಜಿಮೆಂಟ್ ೧೬ ಬಿಹಾರ್ ಗೆ ಮರಳಿದರು. ೨೦೧೯ ಡಿಸೆಂಬರ್ ನಲ್ಲಿ ತಮ್ಮ ರೆಜಿಮೆಂಟ್ ನ ಕಮಾಂಡರ್ ಆಗಿ ನಿಯುಕ್ತಿಗೊಂಡರು. == ಸಾವು == ಗಲ್ವಾನ್ ನದಿ ಕಣಿವೆಯಲ್ಲಿ ಚೀನಾದ ಸೇನೆ ಅಕ್ರಮವಾಗಿ ಭಾರತದ ಗಡಿ ದಾಟಿ, ಡೇರೆ ಕಟ್ಟಿತು. ೧೪ ಜೂನ್ ರಂದು ಕರ್ನಲ್ ಸಂತೋಷ್ ಚೀನಿ ಸೇನೆಯ ಅಧಿಕಾರೈಗಳನ್ನು ಭೇಟಿ ಮಾಡಿ, ಸೌಜನ್ಯಪೂರ್ವಕವಾಗಿ ಹಿಂತೆಗೆಯಲು ಮನವಿ ಮಾಡಿದರು. ಆದರೆ, ಅದಕ್ಕೆ ಕಿವಿಗೊಡದ ಚೀನೀ ಯೋಧರು, ಆಕ್ರಮಣಗೈಯ್ದರು. ೧೫ ಜೂನ್ ರಾತ್ರಿ ಮತ್ತೊಮ್ಮೆ, ಕರ್ನಲ್ ಸಂತೋಷ್ ಚೀನೀಯರ ಬಳಿ ತೆರಳಿದಾಗ, ಚೀನೀ ಸೇನೆ, ಕೋಲು, ಕಬ್ಬಿಣ ಸರಳು ಮತ್ತು ಬೇಟನ್ ಗಳಿಂದ ಕರ್ನಲ್ ಸಂತೋಷ್ ಮೇಲೆ ದಾಳಿ ಮಾಡಿದರು. ಹವಾಲ್ ದಾರ್ ಪಳನಿ, ಸಿಪಾಯಿ ಕುಂದನ್ ಓಝಾ ಮತ್ತು ಕರ್ನಲ್ ಸಂತೋಷ್ ತೀವ್ರವಾಗಿ ಗಾಯಗೊಂಡರು. ಸ್ಥಳದಲ್ಲಿಯೇ ಈ ಮೂವರೂ ವೀರಗತಿ ಹೊಂದಿದರು. ಇವರನ್ನು ಸೇರಿದಂತೆ ಒಟ್ಟು ೨೦ ಭಾರತೀಯ ಯೋಧರು ಅಲ್ಲಿ ವೀರ ಮರಣ ಹೊಂದಿದರು === ಕೊನೆ ವಿಧಿ === ೧೭ ಜೂನ್ ರಂದು ತೆಲಂಗಾಣದ ಹಕೀಂಪೇಟೆಗೆ ಕರ್ನಲ್ ಸಂತೋಷ್ ಕಳೇಬರವನ್ನು ತಂದು, ೧೮ ಜೂನ್ ರಂದು ಅವರ ಮನೆ ಬಳಿ, ಎಲ್ಲಾ ಗೌರವಗಳೊಂದಿಗೆ ಅಂತಿಮ ವಿಧಿಗಳನ್ನು ಪೂರೈಸಲಾಯಿತು. === ಪರಿಹಾರ === ತೆಲಂಗಾಣದ ಮುಖ್ಯಮಂತ್ರಿ ಚಂದ್ರಸೇಖರ ರಾವ್, ಸಂತೋಷ್ ಬಾಬುರವರ ವೀರ ಹೋರಾಟ ಮತ್ತು ಹುತಾತ್ಮ್ಯವನ್ನು ಪುರಸ್ಕರಿಸಲು, ಅವರ ಪರಿವಾರಕ್ಕೆ ಸರ್ಕಾರದ ವತಿಯಿಂದ ೫ ಕೋಟಿ ರೂಪಾಯಿಗಳು, ಒಂದು ನಿವಾಸ ಮತ್ತು ಅವರ ಧರ್ಮಪತ್ನಿಗೆ ಒಂದು ಸರ್ಕಾರಿ ಉದ್ಯೋಗ ಕೊಡುವುದಾಗಿ ಘೋಷಿಸಿದರು. == ಆಧಾರ == == ಹೊರಗಿನ ಕೊಂಡಿಗಳು == ಹುತಾತ್ಮ ಕರ್ನಲ್ ಸಂತೋಷ್ ಬಾಬು ತಾಯಿ ತನ್ನ ವೀರ‌ ಮಗನ ಬಗ್ಗೆ ಆಡಿದ ಮಾತುಗಳು ವೀರಯೋಧ ಸಂತೋಷ್ ಬಾಬು ಅಂತಿಮಯಾತ್ರೆ ಹಿಂದಿನ ದಿನ ರಾತ್ರಿ ತಂದಿಯೊಂದಿಗೆ ಮಾತನಾಡಿದ್ದ ಹುತಾತ್ಮ ಕರ್ನಲ್ ಸಂತೋಷ್ ಬಾಬು